ದತ್ತ ಎಷ್ಟು ಗುರುಗಳನ್ನು ಹೊಂದಿದ್ದರು ಮತ್ತು ಅವರಿಂದ ಯಾವ ಬೋಧನೆಗಳನ್ನು ಪಡೆದರು, ಎನ್ನುವುದನ್ನು ನಾವು ತಿಳಿದುಕೊಳ್ಳೋಣ. ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವೂ 'ಗುರು' ಆಗಿದೆ, ಏಕೆಂದರೆ ಪ್ರತಿಯೊಂದು ವಸ್ತುವಿನಿಂದಲೂ ಏನಾದರೂಕಲಿಯಬಹುದು. ಕೆಟ್ಟ ವಿಷಯಗಳಿಂದ 'ಯಾವ ದುರ್ಗುಣಗಳನ್ನು ತ್ಯಜಿಸಬೇಕು' ಮತ್ತು 'ಒಳ್ಳೆಯ ವಿಷಯಗಳಿಂದ, ಯಾವ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು' ಎಂಬುದು ಕಲಿಯಲು ಸಿಗುತ್ತದೆ. ಉದಾಹರಣೆಗಾಗಿ ಮುಂದೆ ಕೊಟ್ಟಿರುವ ಇಪ್ಪತ್ನಾಲ್ಕು ಗುರುಗಳ ಬಗ್ಗೆ ವಿವರವನ್ನು ನೀಡಲಾಗಿದೆ.
೧. ಪೃಥ್ವಿ
![](https://hindujagruti.org/hinduism-for-kids-kannada/wp-content/uploads/sites/6/2015/01/1386229979_datta_24_guru_01.jpg)
ಪೃಥ್ವಿಯಂತೆ ಸಹನಶೀಲ ಹಾಗೂ ತಾಳ್ಮೆಯುಳ್ಳವನಾಗಿರಬೇಕು.
೨. ವಾಯು
![](https://hindujagruti.org/hinduism-for-kids-kannada/wp-content/uploads/sites/6/2015/01/1386229994_datta_24_guru_02.jpg)
ಯಾವ ರೀತಿಯಲ್ಲಿ ವಾಯುವು ಶೀತ ಉಷ್ಣತೆಗಳಲ್ಲಿ ಸಂಚರಿಸುತ್ತಿರುವಾಗಲೂ ಅವುಗಳ ಗುಣದೋಷಗಳಲ್ಲಿ ಸಿಲುಕಿಕೊಳ್ಳುವುದಿಲ್ಲವೋ, ಹಾಗೆಯೇ ನಾವು ಯಾರ ಗುಣ ದೋಷಗಳನ್ನೂ ನೋಡದೇ ಸುತ್ತಮುತ್ತಲಿನ ವಿಷಯಗಳಿಂದ ವಿಚಲಿತರಾಗದೇ ಮಾರ್ಗಕ್ರಮಣವನ್ನು ಮಾಡಬೇಕು, ವಾಯುವಿನಂತೆ ವಿರಕ್ತರಾಗಿರಬೇಕು.
೩. ಆಕಾಶ
![](https://hindujagruti.org/hinduism-for-kids-kannada/wp-content/uploads/sites/6/2015/01/1386230025_datta_24_guru_03.jpg)
ಆಕಾಶವು ನಿರ್ವಿಕಾರ, ಅಚಲ ಮತ್ತು ಒಂದಾಗಿದೆ.
೪. ನೀರು
![](https://hindujagruti.org/hinduism-for-kids-kannada/wp-content/uploads/sites/6/2015/01/1386230041_datta_24_guru_04.jpg)
ಮನುಷ್ಯನು ನೀರಿನಂತೆ ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸಬೇಕು ಮತ್ತು ಯಾರ ಪಕ್ಷಪಾತವನ್ನೂ ಮಾಡಬಾರದು. ಯಾವ ರೀತಿ ನೀರು ತನ್ನ ಕೊಳೆಯನ್ನು ತಳದಲ್ಲಿಟ್ಟು ಬೇರೆಯವರ ಕೊಳೆಯನ್ನು ಸ್ವಚ್ಛ ಮಾಡುತ್ತದೆಯೋ, ಹಾಗೆಯೇ ಮನುಷ್ಯನು ತನ್ನ ಕೊಳೆಯನ್ನು ತ್ಯಜಿಸಿ ಜ್ಞಾನ ಪ್ರಾಪ್ತಮಾಡಿಕೊಳ್ಳಬೇಕು ಮತ್ತು ಅಜ್ಞಾನಿ ಜನರ ಪಾಪಗಳನ್ನು ಸ್ವಚ್ಛ ಮಾಡಬೇಕು. ಯಾವ ರೀತಿ ಒಂದೇ ಜಾಗದಲ್ಲಿ ನಿಂತ ನೀರು ದುರ್ಗಂಧ ಯುಕ್ತವಾಗುತ್ತದೆಯೋ ಮತ್ತು ಹರಿಯುತ್ತಿದ್ದರೆ ಶುದ್ಧವಾಗುತ್ತದೆಯೋ, ಅದೇ ರೀತಿ ಮನುಷ್ಯರದ್ದೂ ಆಗಿದೆ. ಆದುದರಿಂದ ನಾವು ನಿಂತ ನೀರಾಗದೆ ಹೊಸ ಹೊಸ ವಿಷಯಗಳನ್ನು ಸದಾ ಕಲಿಯಬೇಕು.
೫. ಅಗ್ನಿ
![](https://hindujagruti.org/hinduism-for-kids-kannada/wp-content/uploads/sites/6/2015/01/1386230058_datta_24_guru_05.jpg)
ಮನುಷ್ಯನು ಅಗ್ನಿಯಂತೆ ತಪಸ್ಸು ಮಾಡಿ ಪ್ರಕಾಶಿತನಾಗಬೇಕು ಮತ್ತು ಅಗ್ನಿಯಂತೆ ಯಾವುದು ಸಿಗುತ್ತದೆಯೋ ಅದನ್ನು ಭಕ್ಷಿಸಿ, ದೋಷಾಚರಣೆ ಮಾಡದೇ ತನ್ನ ಒಳ್ಳೆಯ ಗುಣಗಳನ್ನು ಒಳ್ಳೆಯ ಪ್ರಸಂಗದಲ್ಲಿ ಮತ್ತು ಯೋಗ್ಯ ಸ್ಥಳದಲ್ಲಿ ಉಪಯೋಗಿಸಬೇಕು. ಅಗ್ನಿಯಂತೆ ಯಾವಾಗಲೂ ಪವಿತ್ರವಾಗಿರಬೇಕು ಮತ್ತು ಎಲ್ಲರೊಂದಿಗೂ ಸಮನಾಗಿ ವರ್ತಿಸಬೇಕು. ಯಾವ ಯಾವ ದೇವತೆಗಳಿಗೆ ಅಗ್ನಿಯಲ್ಲಿ ಆಹುತಿಯನ್ನು ಕೊಡಲಾಗುತ್ತದೆಯೋ, ಆಯಾಯ ದೇವತೆಗಳಿಗೆ ಅಗ್ನಿಯು ಅದನ್ನು ತಲುಪಿಸುತ್ತದೆ. ಅಂದರೆ ಅಗ್ನಿಯು ತನ್ನಲ್ಲಿ ಏನನ್ನೂ ಇಟ್ಟುಕೊಳ್ಳದೆ ಯಾರಿಗೆ ಏನನ್ನು ತಲುಪಿಸಬೇಕಾಗಿರುತ್ತದೆಯೋ ಅವರಿಗೆ ಅದನ್ನು ತಲುಪಿಸುತ್ತದೆ.
೬. ಚಂದ್ರ
![](https://hindujagruti.org/hinduism-for-kids-kannada/wp-content/uploads/sites/6/2015/01/1386230084_datta_24_guru_06.jpg)
ಯಾವ ರೀತಿ ಚಂದ್ರನಲ್ಲಿ ಕಲೆಗಳಿದ್ದರೂ ಸಹ ಚಂದ್ರ ದುಃಖಿಯಾಗುವುದಿಲ್ಲವೋ ಅದೇ ರೀತಿ ನಮ್ಮ ಶರೀರದ ವಿಕಾರಗಳಿಂದ ನಾವು ದುಃಖಿಯಾಗಬಾರದು.
೭. ಸೂರ್ಯ
![](https://hindujagruti.org/hinduism-for-kids-kannada/wp-content/uploads/sites/6/2015/01/1386230212_datta_24_guru_07.jpg)
ಸೂರ್ಯನು ಭವಿಷ್ಯತ್ಕಾಲದ ಬಗ್ಗೆ ವಿಚಾರ ಮಾಡಿ ನೀರನ್ನು ಸಂಗ್ರಹಿಸಿಡುತ್ತಾನೆ ಮತ್ತು ಯೋಗ್ಯ ಸಮಯ ಬಂದಾಗ ಅದನ್ನು ಪರೋಪಕಾರಕ್ಕಾಗಿ ಭೂಮಿಯ ಮೇಲೆ ಸುರಿಸುತ್ತಾನೆ. ಹಾಗೆಯೇ ಮನುಷ್ಯನು ಉಪಯುಕ್ತವಾದ ವಸ್ತುಗಳನ್ನು ಸಂಗ್ರಹಿಸಿ ದೇಶ, ಕಾಲ ಮತ್ತು ವರ್ತಮಾನ ಸ್ಥಿತಿಗಳ ವಿಚಾರಮಾಡಿ ಪಕ್ಷಪಾತ ಮಾಡದೇ ಎಲ್ಲ ಪ್ರಾಣಿಗಳಿಗೂ ಅವುಗಳ ಲಾಭವಾಗುವಂತೆ ಮಾಡಬೇಕು.
೮. ಪಾರಿವಾಳ
![](https://hindujagruti.org/hinduism-for-kids-kannada/wp-content/uploads/sites/6/2015/01/1386230251_datta_24_guru_08.jpg)
ಪಾರಿವಾಳವು ತನ್ನ ಸಂಸಾರದೊಂದಿಗೆ ಆನಂದದಿಂದ ಇರುತ್ತದೆ. ಆದರೆ ಹದ್ದು ಬಂದು ಪಾರಿವಾಳವನ್ನು ಪರಿವಾರ ಸಮೇತವಾಗಿ ತಿಂದು ನಾಶ ಮಾಡುತ್ತದೆ. ಅದೇ ರೀತಿ ಜೀವನದಲ್ಲಿ ಏನು ಬೇಕಾದರೂ ಆಗಬಹುದು. ಆದ್ದರಿಂದ ನಮ್ಮ ಮನಸ್ಸನ್ನು ಇದರಲ್ಲಿ ಸಕ್ಕಿಹಾಕಿಸದೆ ನಮ್ಮ ಕರ್ತವ್ಯಗಳನ್ನು ಮಾಡಬೇಕು.
೯. ಹೆಬ್ಬಾವು
![](https://hindujagruti.org/hinduism-for-kids-kannada/wp-content/uploads/sites/6/2015/01/1386230268_datta_24_guru_09.jpg)
ಹೆಬ್ಬಾವು ಭಯಪಡದೆ ಪ್ರಾರಬ್ಧದ ಮೇಲೆ ನಂಬಿಕೆಯನ್ನಿಟ್ಟು ಒಂದೇ ಜಾಗದಲ್ಲಿ ಬಿದ್ದುಕೊಂಡಿರುತ್ತದೆ. ಅದು ಯಾವ ಯಾವ ಸಮಯದಲ್ಲಿ ಏನೇನು ಸಿಗುತ್ತದೆಯೋ, ಅದನ್ನು ಭಕ್ಷಿಸಿ ಸಂತೋಷ ಪಡುತ್ತದೆ. ಅದಕ್ಕೆ ಪ್ರಾಪ್ತವಾದ ಆಹಾರವನ್ನು ಹೆಚ್ಚು-ಕಡಿಮೆ ಅಥವಾ ಸಿಹಿ-ಕಹಿ ಎಂದು ವಿಚಾರ ಮಾಡುವುದಿಲ್ಲ. ಕೆಲವೊಂದು ಸಮಯದಲ್ಲಿ ಹೆಬ್ಬಾವು ತಿನ್ನುವುದಕ್ಕೆ ಏನೂ ಸಿಗದಿದ್ದರೂ ಹೆದರುವುದಿಲ್ಲ. ಹಾಗೆಯೇ ಕೆಲವೊಂದು ಸಲ ನಮಗೆ ಏನೂ ಸಿಗದಿದ್ದರೂ ದೇವರ ಮೇಲಿನ ಶ್ರದ್ಧೆಯನ್ನು ಕಡಿಮೆ ಮಾಡಬಾರದು.
೧೦. ಸಮುದ್ರ
![](https://hindujagruti.org/hinduism-for-kids-kannada/wp-content/uploads/sites/6/2015/01/1386230287_datta_24_guru_10.jpg)
ನದಿಗಳು ಬಹಳಷ್ಟು ನೀರನ್ನು ತಂದರೂ ಸಮುದ್ರವು ಸುಖ ಪಡುವುದಿಲ್ಲ ಅಥವಾ ನೀರನ್ನು ತರದಿದ್ದರೆ ದುಃಖ ಪಡುವುದಿಲ್ಲ ಮತ್ತು ಅದರಿಂದ ಉಬ್ಬುವುದೂ ಇಲ್ಲ ಅಥವಾ ಕ್ಷೀಣಿಸುವುದೂ ಇಲ್ಲ. ಹಾಗೆಯೇ ಪ್ರತಿಯೊಬ್ಬ ಮನುಷ್ಯನೂ ಸುಖೋಪಭೋಗಗಳು ಲಭಿಸಿದಾಗ ಸುಖಿಯಾಗಬಾರದು ಅಥವಾ ದುಃಖಗಳು ಬಂದಾಗ ದುಃಖಿತನೂ ಆಗಬಾರದು, ಯಾವಾಗಲೂ ಆನಂದದಲ್ಲಿಯೇ ಇರಬೇಕು. ಯಾವ ರೀತಿಯಲ್ಲಿ ಸಮುದ್ರದ ಅಳತೆಗಳು (ಉದ್ದ, ಅಗಲ, ಆಳ) ಮತ್ತು ಉದರದೊಳಗಿನ ರತ್ನಾದಿಗಳ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲವೋ ಹಾಗೆಯೇ ನಮ್ಮಲ್ಲಿರುವ ಒಳ್ಳೆಯ ಗುಣಗಳು ಯಾರಿಗೂ ತಿಳಿಯಬಾರದು. ಆದರೆ ಅವುಗಳನ್ನು ಯಾವಾಗಲೂ ಪರೋಪಕಾರಕ್ಕಾಗಿ ಉಪಯೋಗಿಸಬೇಕು.
೧೧. ದೀಪದ ಹುಳ
![](https://hindujagruti.org/hinduism-for-kids-kannada/wp-content/uploads/sites/6/2015/01/1386230316_datta_24_guru_11.jpg)
ಯಾವ ರೀತಿ ಉರಿಯುತ್ತಿರುವ ದೀಪದಿಂದ ಹರಡಿದ ಮೋಹಕವಾದ ತೇಜವನ್ನು ನೋಡಿ ದೀಪದ ಹುಳವು ಮೋಹಿತವಾಗುತ್ತದೆಯೋ ಮತ್ತು ಅದರ ಮೇಲೆ ಎರಗಿ ಸುಟ್ಟು ಸಾಯುತ್ತದೆಯೋ ಹಾಗೆಯೇ, ಯಾವ ಮನುಷ್ಯನು ಮೋಹಿತನಾಗುತ್ತಾನೆಯೋ ಅವನು ದೀಪದ ಹುಳದಂತೆ ಅದರಲ್ಲಿಯೇ ನಾಶವಾಗುತ್ತಾನೆ.
೧೨. ಜೇನುನೊಣ
![](https://hindujagruti.org/hinduism-for-kids-kannada/wp-content/uploads/sites/6/2015/01/1386230339_datta_24_guru_12.jpg)
ಜೇನುನೊಣವು ಬಹಳ ಕಷ್ಟಪಟ್ಟು ಇಕ್ಕಟ್ಟಿನ ಜಾಗದಲ್ಲಿ, ಎತ್ತರದ ಮರದ ಮೇಲೆ ಜೇನುಗೂಡನ್ನು ಕಟ್ಟಿ ಅದರಲ್ಲಿ ಜೇನುತುಪ್ಪವನ್ನು ಶೇಖರಿಸುತ್ತದೆ. ಅದನ್ನು ತಾನೂ ತಿನ್ನುವುದಿಲ್ಲ ಮತ್ತು ಬೇರೆ ಯಾರಿಗೂ ತಿನ್ನಲು ಕೊಡುವುದಿಲ್ಲ. ಕೊನೆಗೆ ಜೇನುತುಪ್ಪವನ್ನು ಸಂಗ್ರಹ ಮಾಡುವವರು ಹಠಾತ್ತಾಗಿ ಬಂದು, ಜೇನುನೊಣಗಳನ್ನು ಸಾಯಿಸಿ ಜೇನುತುಪ್ಪವನ್ನು ಗೂಡುಸಮೇತವಾಗಿ ತೆಗೆದುಕೊಂಡು ಹೋಗುತ್ತಾರೆ. ಹಾಗೆಯೇ ಯಾವ ಜಿಪುಣನು ಬಹಳಷ್ಟು ಪ್ರಯತ್ನಪಟ್ಟು ದ್ರವ್ಯವನ್ನು ಸಂಪಾದನೆ ಮಾಡಿ ಶೇಖರಿಸಿಟ್ಟುಕೊಳ್ಳುತ್ತಾನೆಯೋ, ಅವನು ಅಗ್ನಿ, ಕಳ್ಳರು ಅಥವಾ ರಾಜರು ಹಠಾತ್ತಾಗಿ ಬಂದು ಆ ದ್ರವ್ಯವನ್ನು ಅಪಹರಿಸುವುದರಿಂದ ದುಃಖಿತನಾಗುತ್ತಾನೆ, ಅಥವಾ ಅವನಿಗೆ ಅಯೋಗ್ಯ ಸಂತತಿ ಪ್ರಾಪ್ತವಾಗಿ ಆ ಸಂತತಿಯಿಂದ ದ್ರವ್ಯದ ಅಪವ್ಯಯವಾಗುತ್ತದೆ ಅಥವಾ ಅವನು ಸಂತತಿರಹಿತನಾಗಿ ಮರಣ ಹೊಂದುತ್ತಾನೆ. ಹೀಗೆ ಅವನ ಮರಣದ ನಂತರ ಆ ದ್ರವ್ಯವು ಎಲ್ಲಿರುತ್ತದೆಯೋ ಅಲ್ಲಿಯೇ ಉಳಿಯುತ್ತದೆ ಅಥವಾ ಬೇರೆ ಯಾರಿಗಾದರೂ ಪ್ರಾಪ್ತವಾಗುತ್ತದೆ. ಅವನಿಗೆ ಮರಣದ ಸಮಯದಲ್ಲಿ ಆ ದ್ರವ್ಯದ ಮೇಲೆ ಆಸಕ್ತಿ ಇದ್ದರೆ ಅವನು ಪಿಶಾಚಿ ಅಥವಾ ಸರ್ಪನಾಗಿ ಆ ದ್ರವ್ಯವನ್ನು ಉಪಯೋಗಿಸುವವರಿಗೆ ಉಪದ್ರವ ಕೊಡುತ್ತಾನೆ. ಈ ರೀತಿಯಲ್ಲಿ ಜೇನುನೊಣದಂತೆ ಧನವನ್ನು ಸಂಗ್ರಹಿಸುವುದರಿಂದ ಹಠಾತ್ತಾಗಿ ಮರಣ ಬರುತ್ತದೆ. ಈ ಉಪದೇಶವನ್ನು ಪಡೆದುಕೊಂಡು ದ್ರವ್ಯಸಂಗ್ರಹ ಮಾಡುವುದನ್ನು ಬಿಡಬೇಕು.
೧೩. ಗಜೇಂದ್ರ (ಆನೆ)
![](https://hindujagruti.org/hinduism-for-kids-kannada/wp-content/uploads/sites/6/2015/01/1386230361_datta_24_guru_13.jpg)
ಆನೆಯು ಬಲಾಢ್ಯವಾಗಿದ್ದರೂ ಜನರು ಅದನ್ನು ವಶ ಪಡಿಸಿಕೊಳ್ಳುವುದಕ್ಕಾಗಿ ಒಂದು ಗುಂಡಿಯನ್ನು ತೋಡಿ ಅದರ ಮೇಲೆ ಹುಲ್ಲನ್ನು ಹಾಕುತ್ತಾರೆ ಮತ್ತು ಕಟ್ಟಿಗೆಯ ಒಂದು ಹೆಣ್ಣು ಆನೆಯ ಪ್ರತಿಕೃತಿಯನ್ನು ಮಾಡಿ ಅದರ ಮೇಲೆ ಆನೆಯ ಚರ್ಮವನ್ನು ಹೊದಿಸಿ ಆ ಗುಂಡಿಯ ಮೇಲೆ ನಿಲ್ಲಿಸುತ್ತಾರೆ. ಅದನ್ನು ನೋಡಿ ಆನೆಯು ಆಸೆಯಿಂದ ಮೋಹಗೊಂಡು ಆ ಕಟ್ಟಿಗೆಯ ಆನೆಯತ್ತ ಬರುತ್ತದೆ ಮತ್ತು ಗುಂಡಿಯೊಳಗೆ ಬೀಳುತ್ತದೆ ಮತ್ತು ಸುಲಭವಾಗಿ ಜನರ ಕೈಗೆ ಸಿಕ್ಕಿಕೊಳ್ಳುತ್ತದೆ. ಹಾಗೆಯೇ ಯಾವ ಪುರುಷನು ಸ್ತ್ರೀಸುಖಕ್ಕೆ ಮರುಳಾಗುತ್ತಾನೆಯೋ, ಅವನು ಬಂಧನದಲ್ಲಿ ಸಿಲುಕಿಕೊಳ್ಳುತ್ತಾನೆ.
೧೪. ಭ್ರಮರ (ಭೃಂಗ)
![](https://hindujagruti.org/hinduism-for-kids-kannada/wp-content/uploads/sites/6/2015/01/1386230382_datta_24_guru_14.jpg)
ಸೂರ್ಯವಿಕಾಸೀ ಕಮಲಗಳು (ಸೂರ್ಯನೊಂದಿಗೆ ಅರಳುವ ಮತ್ತು ಸೂರ್ಯಾಸ್ತವಾದ ನಂತರ ಮುದುಡುವ ಕಮಲ) ಸೂರ್ಯಾಸ್ತದ ಸಮಯದಲ್ಲಿ ಮುಚ್ಚುತ್ತವೆ. ಇಂತಹ ಸಮಯದಲ್ಲಿ ಅದರ ಮೇಲೆ ಭ್ರಮರವು ಕುಳಿತಿದ್ದರೆ ಅದು ಕಮಲದೊಳಗೆ ಸಿಳುಕಿಕೊಳ್ಳುತ್ತದೆ. ಇದರಿಂದ, ವಿಷಯಾಸಕ್ತಿಯಲ್ಲಿ ಬಂಧನವಿರುತ್ತದೆ ಎಂಬುದು ತಿಳಿದುಬರುತ್ತದೆ. ಇದನ್ನು ತಿಳಿದುಕೊಂಡು ಮನುಷ್ಯರು ವಿಷಯಾಸಕ್ತರಾಗಬಾರದು. ಭ್ರಮರವು ಒಂದೇ ಕಮಲದ ಸುಗಂಧವನ್ನು ಸೇವಿಸದೇ ಬಹಳಷ್ಟು ಕಮಲಗಳ ಸುವಾಸನೆಯ ಆನಂದವನ್ನು ಪಡೆಯುತ್ತಿರುತ್ತದೆ. ಹಾಗೆಯೇ ನಾವು ಪ್ರತಿಯೊಂದುನ್ನು ಕಲಿಯಲು ಪ್ರಯತ್ನಿಸಬೇಕು.
೧೫. ಕಸ್ತೂರಿಮೃಗ
![](https://hindujagruti.org/hinduism-for-kids-kannada/wp-content/uploads/sites/6/2015/01/1386230430_datta_24_guru_15.jpg)
ವಾಯುವಿನಂತೆ ವೇಗವಿರುವ ಕಸ್ತೂರಿ ಮೃಗವು ಯಾರ ಕೈಗೂ ಸಿಗುವುದಿಲ್ಲ. ಅದಕ್ಕೆ ಅದನ್ನು ಹಿಡಿಯಲು ಬೇಟೆಗಾರರು ಸಂಗೀತವನ್ನು ಕೇಳಿಸುತ್ತಾರೆ. ಸಂಗೀತದ ಮಧುರ ಗಾಯನಕ್ಕೆ ಮೋಹಪರವಶವಾಗಿ ಅದು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಯಾವುದೇ ಮೋಹದಲ್ಲಿ ಸಿಲುಕಿಕೊಳ್ಳಬಾರದು.
೧೬. ಮತ್ಸ್ಯ (ಮೀನು)
![](https://hindujagruti.org/hinduism-for-kids-kannada/wp-content/uploads/sites/6/2015/01/1386230470_datta_24_guru_16.jpg)
ಕಬ್ಬಿಣದ ಗಾಳಕ್ಕೆ ಮಾಂಸವನ್ನು ಕಟ್ಟಿ ನೀರಿನೊಳಗೆ ಬಿಟ್ಟಾಗ ಆ ಮಾಂಸಕ್ಕೆ ಮೋಹಿತವಾಗಿ ಮೀನುಗಳು ಆ ಗಾಳವನ್ನು ನುಂಗುತ್ತವೆ ಮತ್ತು ಆ ಗಾಳದಲ್ಲಿನ ಮುಳ್ಳು ಬಾಯಲ್ಲಿ ಸಿಕ್ಕಿಕೊಂಡದ್ದರಿಂದ ಪ್ರಾಣ ಕಳೆದುಕೊಳ್ಳುತ್ತವೆ. ಹಾಗೆಯೇ ಮನುಷ್ಯನು ನಾಲಿಗೆಯ ರುಚಿಯಲ್ಲಿ ಬದ್ಧನಾಗಿದ್ದು ಜನ್ಮಮರಣದ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತಾನೆ.
೧೭. ಪಿಂಗಲಾ ವೇಶ್ಯೆ
![](https://hindujagruti.org/hinduism-for-kids-kannada/wp-content/uploads/sites/6/2015/01/1386230494_datta_24_guru_17.jpg)
ಒಂದು ರಾತ್ರಿ ಬಹಳಷ್ಟು ಸಮಯ ಯಾವುದೇ ಪುರುಷನು ಪಿಂಗಲಾ ಬಳಿಗೆ ಬರಲಿಲ್ಲ. ಕೊನೆಗೆ ಬೇಸರವಾಗಿ ಅವಳಿಗೆ ಹಠಾತ್ತಾಗಿ ವೈರಾಗ್ಯ ಬಂದಿತು. ಎಲ್ಲಿಯವರೆಗೆ ಮನುಷ್ಯನಲ್ಲಿ ಆಸೆಯು ಪ್ರಬಲವಾಗಿರುತ್ತದೆಯೋ ಅಲ್ಲಿಯವರೆಗೆ ಅವನಿಗೆ ಸುಖನಿದ್ರೆ ಬರುವುದಿಲ್ಲ. ಯಾವ ಪುರುಷನು ಆಸೆಯನ್ನು ತ್ಯಜಿಸಿದ್ದಾನೆಯೋ ಅವನಿಗೆ ಈ ಸಂಸಾರದ ದುಃಖಗಳು ಬಾಧಿಸುವುದಿಲ್ಲ.
೧೮. ಟಿಟ್ಟಿಭ (ಒಂದು ಜಾತಿಯ ಪಕ್ಷಿ)
![](https://hindujagruti.org/hinduism-for-kids-kannada/wp-content/uploads/sites/6/2015/01/1386230516_datta_24_guru_18.jpg)
ಒಮ್ಮೆ ಒಂದು ಟಿಟ್ಟಿಭವು ಕೊಕ್ಕಿನಲ್ಲಿ ಮೀನನ್ನು ಹಿಡಿದು ಹೋಗುತ್ತಿರುವುದನ್ನು ನೋಡಿ ನೂರಾರು ಕಾಗೆಗಳು ಮತ್ತು ಹದ್ದುಗಳು ಅದರ ಹಿಂದೆ ಬಿದ್ದು ಅದನ್ನು ಕುಕ್ಕಿ, ಬಲಹೀನವಾಗಿ ಮಾಡಿ, ಆ ಮೀನನ್ನು ಕಿತ್ತುಕೊಳ್ಳಲು ಪ್ರಯತ್ನ ಮಾಡತೊಡಗಿದವು. ಅದು ಎಲ್ಲಿ ಹೋದರೂ ಆ ಕಾಗೆಗಳು ಮತ್ತು ಹದ್ದುಗಳು ಅದನ್ನು ಹಿಂಬಾಲಿಸುತ್ತಿದ್ದವು. ಕೊನೆಗೆ ದಣಿದು ಹತಾಶವಾಗಿ, ಬೇರೆ ಏನೂ ತೋಚದೇ ಆ ಟಿಟ್ಟಿಭವು ಆ ಮೀನನ್ನು ಬಾಯಿಯಿಂದ ಬಿಟ್ಟುಬಿಟ್ಟಿತು. ಕೂಡಲೇ ಒಂದು ಹದ್ದು ಆ ಮೀನನ್ನು ಹಿಡಿದುಕೊಂಡಿತು. ಇದನ್ನು ನೋಡುವುದೇ ತಡ, ಎಲ್ಲ ಕಾಗೆಗಳು ಮತ್ತು ಹದ್ದುಗಳು ಆ ಟಿಟ್ಟಿಭವನ್ನು ಬಿಟ್ಟು ಮೀನನ್ನು ಹಿಡಿದಿದ್ದ ಹದ್ದನ್ನು ಹಿಂಬಾಲಿಸತೊಡಗಿದವು. ಇದರಿಂದ ಆ ಟಿಟ್ಟಿಭವು ನಿಶ್ಚಿಂತೆಯಾಗಿ ಒಂದು ಮರದಮೇಲೆ ಹೋಗಿ ಕುಳಿತಿತು. ಈ ಸಂಸಾರದಲ್ಲಿ ಮೋಹವನ್ನು ಬಿಡುವುದರಲ್ಲಿಯೇ ಶಾಂತಿ ಇದೆ, ಇಲ್ಲದಿದ್ದರೆ ಘೋರ ವಿಪತ್ತು ಇದೆ.
೧೯. ಬಾಲಕ
![](https://hindujagruti.org/hinduism-for-kids-kannada/wp-content/uploads/sites/6/2015/01/1386230541_datta_24_guru_19.jpg)
ಮಾನಾಪಮಾನಗಳ ಬಗ್ಗೆ ವಿಚಾರ ಮಾಡದೆ, ಎಲ್ಲ ಚಿಂತೆಗಳ ಪರಿಹಾರ ಮಾಡಿಕೊಂಡು ಬಾಲಕನಂತೆ ಆನಂದದಿಂದ ಇರಬೇಕು.
೨೦. ಕೈಬಳೆ
![](https://hindujagruti.org/hinduism-for-kids-kannada/wp-content/uploads/sites/6/2015/01/1386230573_datta_24_guru_20.jpg)
ಎರಡು ಬಳೆಗಳಿದ್ದರೆ ಒಂದಕ್ಕೊಂದು ತಗಲಿ ಶಬ್ದವಾಗುತ್ತದೆ. ಬಳೆಗಳು ಹೆಚ್ಚಿಗೆ ಇದ್ದರೆ ಹೆಚ್ಚು ಶಬ್ದವಾಗುತ್ತದೆ. ಹಾಗೆಯೇ ಇಬ್ಬರು ವ್ಯಕ್ತಿಗಳಿದ್ದರೆ ಮಾತುಕತೆಗಳಾಗುತ್ತವೆ ಮತ್ತು ಬಹಳಷ್ಟು ಜನರು ಒಟ್ಟಿಗೆ ಇದ್ದರೆ ಅಲ್ಲಿ ಕಲಹವಾಗುತ್ತದೆ. ಇವೆರಡರಿಂದಲೂ ಮನಸ್ಸು ಶಾಂತವಿರಲಾರದು. ಆದುದರಿಂದ ಓದುವಾಗ, ಧ್ಯಾನಯೋಗಾದಿ ಸಾಧನೆಯನ್ನು ಮಾಡುವಾಗ ಒಂಟಿಯಾಗಿರಬೇಕು.
೨೧. ಶಸ್ತ್ರಕಾರ (ಶಸ್ತ್ರಗಳನ್ನು ತಯಾರಿಸುವವನು)
![](https://hindujagruti.org/hinduism-for-kids-kannada/wp-content/uploads/sites/6/2015/01/1386230598_datta_24_guru_21.jpg)
ಒಮ್ಮೆ ಓರ್ವ ಶಸ್ತ್ರಕಾರನು ಏಕಾಗ್ರ ಚಿತ್ತದಿಂದ ಬಾಣದ ಅಲಗನ್ನು ಹರಿತಗೊಳಿಸುತ್ತಿದ್ದನು. ಆ ಸಮಯದಲ್ಲಿ ರಾಜನ ಸವಾರಿಯು ಸರಂಜಾಮುಸಹಿತ ಅವನ ಸಮೀಪದಿಂದ ಹೋಯಿತು. ನಂತರ ಒಬ್ಬ ಮನುಷ್ಯನು ಬಂದು ‘ಈ ಮಾರ್ಗದಿಂದ ರಾಜನ ಮೆರವಣಿಗೆ ಹೋದದ್ದನ್ನು ನೀವು ನೋಡಿದಿರಾ?’ ಎಂದು ಕೇಳಿದನು. ಆಗ ಆ ಶಸ್ತ್ರಕಾರನು ‘ನಾನು ನನ್ನ ಕೆಲಸದಲ್ಲಿ ಮಗ್ನನಾಗಿದ್ದರಿಂದ ನಾನೇನೂ ನೋಡಲಿಲ್ಲ’ ಎಂದನು. ಈ ಶಸ್ತ್ರಕಾರನಂತೆ ನಾವು ಪ್ರತಿಯೊಂದು ಕಾರ್ಯ ಮಾಡಬೇಕು.
೨೨. ಸರ್ಪ
![](https://hindujagruti.org/hinduism-for-kids-kannada/wp-content/uploads/sites/6/2015/01/1386230628_datta_24_guru_22.jpg)
ಸರ್ಪಗಳು ಸದ್ದು ಮಾಡದೇ ಜಾಗ್ರತೆಯಿಂದ ತಿರುಗಾಡುತ್ತವೆ. ಅವುಗಳು ಬಹಿರಂಗವಾಗಿ ತಿರುಗಾಡುವುದಿಲ್ಲ, ಪ್ರಮಾದವಿಲ್ಲದೆ ನಿಂದನೆಯನ್ನೂ ಮಾಡುವುದಿಲ್ಲ ಮತ್ತು ಅಪಕಾರ ಮಾಡಿದ ಹೊರತು ಯಾರ ಮೇಲೆಯೂ ಕೋಪಿಸಿಕೊಳ್ಳುವುದಿಲ್ಲ. ಅವುಗಳನ್ನು ಕೆಣಕದ ಹೊರತು ಅವು ಯಾರನ್ನೂ ಕಚ್ಚುವುದಿಲ್ಲ. ಅದರಂತೆ ಮಿತವಾಗಿ ಮಾತನಾಡಬೇಕು, ಯಾರೊಂದಿಗೂ ಜಗಳ ಮಾಡಬಾರದು, ಸದಾ ವಿವೇಕದಿಂದ ವರ್ತಿಸಬೇಕು, ಯಾರಿಗೂ ನೋವುಂಟು ಮಾಡಬಾರದು.
೨೩. ಜೇಡ
![](https://hindujagruti.org/hinduism-for-kids-kannada/wp-content/uploads/sites/6/2015/01/1386230641_datta_24_guru_23.jpg)
ಜೇಡವು ತನ್ನ ನಾಭಿಯಿಂದ ಎಳೆಗಳನ್ನು ತೆಗೆದು, ಅದರಿಂದ ಮನೆಯನ್ನು ನಿರ್ಮಿಸುತ್ತದೆ ಮತ್ತು ಹಗಲೂರಾತ್ರಿ ಅದರಲ್ಲಿ ಆಟವಾಡುತ್ತದೆ. ಮುಂದೆ ಮನಸ್ಸಿಗೆ ಬಂದಾಗ ಆ ಮನೆಯನ್ನು ನುಂಗಿ ಸ್ವತಂತ್ರವಾಗುತ್ತದೆ. ಹಾಗೆಯೇ ಈಶ್ವರನು ತನ್ನ ಇಚ್ಛೆಯಂತೆ ಜಗತ್ತನ್ನು ನಿರ್ಮಾಣ ಮಾಡಿ ಅದರೊಂದಿಗೆ ಬೇರೆಬೇರೆ ಆಟಗಳನ್ನು ಆಡುತ್ತಾನೆ. ಮುಂದೆ ಮನಸ್ಸಿಗೆ ಬಂದಾಗ ತನ್ನ ಇಚ್ಛೆಯಂತೆ ಅದನ್ನು ನಾಶಮಾಡಿ ಒಂಟಿಯಾಗಿ ಇರುತ್ತಾನೆ. ಹೇಗೆ ಜೇಡವು ಪುನಃ ಪುನಃ ಎಳೆಗಳನ್ನು ತೆಗೆದು ಮನೆಯನ್ನು ತಯಾರಿಸಬಲ್ಲದೋ, ಹಾಗೆಯೇ ಈಶ್ವರನು ಕೂಡ ತನ್ನ ಇಚ್ಛೆಯಂತೆ ಜಗತ್ತನ್ನು ಉತ್ಪತ್ತಿ ಮಾಡಿ ಅದನ್ನು ತನ್ನಲ್ಲಿಯೇ ಲಯಪಡಿಸಿ ಮತ್ತೆ ಮನಸ್ಸಿಗೆ ಬಂದಾಗ ಅದನ್ನು ಮೊದಲಿನಂತೆಯೇ ನಿರ್ಮಿಸಬಲ್ಲನು. ಆದುದರಿಂದ ಜಗತ್ತಿನಲ್ಲಿನ ಘಟನೆಗಳಿಗೆ ಹೆಚ್ಚಿನ ಮಹತ್ವವನ್ನು ಕೊಡಬಾರದು.
೨೪. ಕಣಜ
![](https://hindujagruti.org/hinduism-for-kids-kannada/wp-content/uploads/sites/6/2015/01/1386230667_datta_24_guru_24.jpg)
ಯಾವುದಾದರೊಂದು ಜೀವವು ಸತತವಾಗಿ ಯಾವುದರ ಧ್ಯಾನ ಮಾಡುತ್ತದೆಯೋ (ಆ ಧ್ಯಾನದ ಪರಿಣಾಮದಿಂದ) ಅದು ಅದರಂತೆಯೇ ಆಗುತ್ತದೆ. ಕಣಜದ ಹುಳುವು ಮಣ್ಣಿನ ಮನೆ ಮಾಡಿ ಅದರಲ್ಲಿ ಒಂದು ಕೀಟವನ್ನು ತಂದು ಇಡುತ್ತದೆ ಮತ್ತು ಆಗಾಗ್ಗೆ ಬಂದು ಅದರ ಮೇಲೆ (ಗಾಳಿಯನ್ನು) ಊದುತ್ತದೆ. ಇದರಿಂದ ಆ ಕೀಟಕ್ಕೆ ಯಾವಾಗಲೂ ಆ ಕಣಜದ ಹುಳುವಿನ ಧ್ಯಾನವೇ ಇರುತ್ತದೆ ಮತ್ತು ಕೊನೆಗೆ ಅದು ಕೂಡ ಕಣಜದ ಹುಳುವೇ ಆಗುತ್ತದೆ. ಹಾಗೆಯೇ ನಾವು ಸತತ ನಮ್ಮ ಗುರಿಯ ಕಡೆಗೆ ಧ್ಯಾನ ಮಾಡಬೇಕು.
ಆಧಾರ : ‘ಬ್ರಹ್ಮೀಭೂತ ಶ್ರೀಮತ್ ಪರಮ ಪೂಜ್ಯ ವಾಸುದೇವಾನಂದ ಸರಸ್ವತಿ (ಟೇಂಬೆ) ಸ್ವಾಮಿಗಳ ಚರಿತ್ರೆ’