ಗಣಪತಿಯ ನಾಮಜಪ

ದೇವರ ಬಗ್ಗೆ ಭಕ್ತಿಭಾವ ನಿರ್ಮಾಣವಾದ ನಂತರ ದೇವರ ನಾಮಜಪವನ್ನು ಹೇಗೆ ಮಾಡಿದರೂ ನಡೆಯುತ್ತದೆ. ಆದರೆ ಭಕ್ತಿಭಾವವು ಬೇಗನೆ ನಿರ್ಮಾಣವಾಗಲು ಮತ್ತು ದೇವರ ತತ್ತ್ವದ ಹೆಚ್ಚೆಚ್ಚು ಲಾಭವಾಗಲು ನಾಮಜಪದ ಉಚ್ಚಾರ ಯೋಗ್ಯವಾಗಿರುವುದು ಅವಶ್ಯಕವಾಗಿದೆ.

ತಾರಕ ಮತ್ತು ಮಾರಕ ಎಂದು ದೇವರ ಎರಡು ರೂಪಗಳಿರುತ್ತದೆ. ಭಕ್ತರಿಗೆ ಆಶೀರ್ವಾದವನ್ನು ನೀಡುವ ರೂಪವೆಂದರೆ ತಾರಕ ರೂಪ. ಉದಾ: ಆಶೀರ್ವಾದ ಮುದ್ರೆಯಲ್ಲಿ ಸಾಮಾನ್ಯವಾಗಿ ಕಾಣಿಸುವ ಗಣಪತಿ. ಅಸುರರ ಸಂಹಾರವನ್ನು ಮಾಡುವ ರೂಪವೆಂದರೆ ಮಾರಕರೂಪ. ಉದಾ: ಸಿಂಧುರಾಸುರ ಮುಂತಾದ ಅಸುರರ ನಾಶವನ್ನು ಮಾಡುತ್ತಿರುವ ಗಣಪತಿ. ದೇವರ ಬಗ್ಗೆ ಸಾತ್ತ್ವಿಕ ಭಾವ ನಿರ್ಮಾಣವಾಗಲು ತಾರಕ ರೂಪದ ನಾಮಜಪದ ಅವಶ್ಯಕತೆಯಿರುತ್ತದೆ ಮತ್ತು ದೇವರಿಂದ ಶಕ್ತಿ ಮತ್ತು ಚೈತನ್ಯ ಗ್ರಹಿಸಲು ಅವರ ಮಾರಕ ರೂಪದ ನಾಮಜಪದ ಅವಶ್ಯಕತೆ ಇರುತ್ತದೆ.

ಗಣಪತಿಯ ತಾರಕ-ಮಾರಕ ಸಂಯುಕ್ತ ನಾಮಜಪವನ್ನು ಯೋಗ್ಯ ಉಚ್ಚಾರ ಸಹಿತ ಹೇಗೆ ಮಾಡಬೇಕೆಂದು ಹೇಳಲಾಗಿದೆ

’ಓಂ ಗಂ ಗಣಪತಯೇ ನಮಃ’ (ಶ್ರೀ ಗಣೇಶಾಯ ನಮಃ) ಈ ನಾಮಜಪ ಮಾಡುವಾಗ ನಾಮಜಪದಲ್ಲಿ ತಾರಕ ಭಾವ ಬರಲು ’ನಮಃ’ ಎಂಬ ಶಬ್ದಕ್ಕೆ ಒತ್ತು ನೀಡದೇ ನಿಧಾನವಾಗಿ ಹೇಳಬೇಕು. ಆಗ ನಾವು ಗಣೇಶನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದೇವೆ ಎಂಬ ಭಾವವನ್ನಿಡಬೇಕು. ’ಗಣಪತಯೇ’ ಶಬ್ದದ ನಂತರ ಸ್ವಲ್ಪ ಹೊತ್ತು ತಡೆದು ನಂತರ ’ನಮಃ’ ಎಂದು ಹೇಳಬೇಕು. ನಾಮಜಪದಲ್ಲಿ ಮಾರಕ ಭಾವ ಬರಲು ’ಗಣಪತಯೇ’ ಈ ಶಬ್ದದ ’ಯೇ’ ಅಕ್ಷರದ ಮೇಲೆ ಒತ್ತು ನೀಡಬೇಕು. ಗಣಪತಿಯ ನಾಮಜಪ ಪ್ರಾಣಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರಾಣಶಕ್ತಿ ಹೆಚ್ಚಾದಾಗ ಉತ್ಸಾಹ ಸಿಗುತ್ತದೆ.


Leave a Comment