ಮನಃಶಾಂತಿ

ಒಬ್ಬನು ಮನಶಾಂತಿಯನ್ನು ಹುಡುಕಿಕೊಂಡು ವಿವಿಧ ಆಧಾತ್ಮಿಕ ಗುರುಗಳು ಹೇಳಿದಂತೆ ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದ್ದನು. ಅವನು ಒಮ್ಮೆ ಸ್ವಾಮಿ ವಿವೇಕಾನಂದರನ್ನು ಭೇಟಿಯಾಗಿ ’ಸ್ವಾಮೀಜಿ, ನಾನು ಒಂದು ಮುಚ್ಚಿದ ಕೋಣೆಯಲ್ಲಿ ಗಂಟೆಗಟ್ಟೆಲೆ ಕುಳಿತು ಧ್ಯಾನ ಮಾಡುತ್ತೇನೆ, ಅದರೆ ನನಗೆ ಮನಃಶಾಂತಿ ಸಿಗಲಿಲ್ಲ’ ಎಂದು ಹೇಳಿದನು. ಆಗ ಸ್ವಾಮೀ ವಿವೇಕಾನಂದರು ’ ಮೊಟ್ಟಮೊದಲು ನೀನು ನಿನ್ನ ಕೋಣೆಯ ಬಾಗಿಲನ್ನು ತೆರೆದಿಡು. ಅನಂತರ ಹೊರಗೆ ದುಃಖದಲ್ಲಿರುವವರನ್ನು, ಅನಾರೋಗ್ಯದಿಂದ ಬಳಲುವವರನ್ನು ಹಾಗೂ ಹಸಿದವರನ್ನು ನೋಡಿ ಅವರಿಗೆ ನಿನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡು’ ಎಂದು ಹೇಳಿದರು.

ಆಗ ಆ ವ್ಯಕ್ತಿಯು ವಿವೇಕಾನಂದರಿಗೆ ’ರೋಗಿಗಳ ಸೇವೆಯನ್ನು ಮಾಡುವುದರಿಂದ ನನಗೆ ರೋಗ ಬಂದರೆ ಏನು ಮಾಡಲಿ?’ ಎಂದು ಕೇಳಿದನು. ಅವನ ಈ ಸಂದೇಹವನ್ನು ಕೇಳಿ ಸ್ವಾಮೀ ವಿವೇಕಾನಂದರು ’ನೀನು ಪ್ರತಿಯೊಂದು ಒಳ್ಳೆಯ ಕೆಲಸದಲ್ಲಿಯೂ ತಪ್ಪನ್ನು ಹುಡುಕುತ್ತಿರುವುದರಿಂದ ನಿನಗೆ ಮನಃಶಾಂತಿ ಸಿಗುತ್ತಿಲ್ಲ, ಶ್ರೇಷ್ಠ ಕಾರ್ಯವನ್ನು ಮಾಡಲು ಬಹಳ ತಡ ಮಾಡಬಾರದು. ಅಂತೆಯೇ ಅದರಲ್ಲಿ ತಪ್ಪು ಕಂಡು ಹಿಡಿಯಬಾರದು. ಇದೇ ಮನಃಶಾಂತಿಯನ್ನು ಪಡೆಯುವ ಏಕೈಕ ಮಾಧ್ಯಮವಾಗಿದೆ.’ ಎಂದು ಹೇಳಿದರು.