ಸಂತ ನಾಮದೇವ

ಒಂದು ಸಲ ಸಂತ ನಾಮದೇವ ಮತ್ತು ಸಂತ ಜ್ಞಾನೇಶ್ವರ ತೀರ್ಥಯಾತ್ರೆಗೆ ಹೊರಟರು. ವಾರಣಾಸಿ, ಗಯಾ, ಪ್ರಯಾಗ ತೀರ್ಥಗಳಿಗೆ ಭೇಟಿ ನೀಡಿ ಅವರು ಔಂಧ ನಾಗನಾಥ ತಲುಪಿದರು. ಇದು ಭಗವಾನ ಶಂಕರನ ಸ್ಥಾನ. ಇತರ ಸ್ಥಳಗಳಲ್ಲಿ ನಡೆದ ಹಾಗೆ ಇಲ್ಲಿಯೂ ಅವರು ಕೀರ್ತನೆ ಮಾಡಿ, ಈಶ್ವರನ ಚರಣಗಳಲ್ಲಿ ಸೇವೆ ಅರ್ಪಿಸಲು ನಿಶ್ಚಯಿಸಿದರು.

ನಾಮದೇವರು ಮಹಾದೇವನನ್ನು ವಂದಿಸಿ ಕೀರ್ತನೆ ಪ್ರಾರಂಭ ಮಾಡಿದರು. ಕೀರ್ತನೆ ಕೇಳಲು ಬಹಳ ಜನರು ಬಂದರು. ಎಲ್ಲರೂ ಕೀರ್ತನೆ ಕೇಳುವುದರಲ್ಲಿ ತಲ್ಲೀನರಾದರು. ಅಷ್ಟರಲ್ಲಿ ಅಲ್ಲಿ ಕೋಲಾಹಲವೆಬ್ಬಿತು. ಜನರ ದೃಷ್ಟಿ ಅದರತ್ತ ಹೋಯಿತು. ಕೀರ್ತನೆ ನಿಲ್ಲಿಸಲಾಯಿತು. ಕೆಲವು ಉದ್ರಿಕ್ತರಾದ ಪುರೋಹಿತರು ದೇವಸ್ಥಾನದ ದ್ವಾರದಿಂದ ಒಳಗೆ ಬಂದರು. ಅವರು ನಾಮದೇವರನ್ನು ಸಂಬೋಧಿಸಿ “ಇಲ್ಲಿ ಕೈಲಾಶಪತಿ ಉಮಾರಮಣಾನಿದ್ದಾನೆ, ಅವನಿಗೆ ಹರಿ ಕೀರ್ತನೆ ಇಷ್ಟವಿಲ್ಲ, ನೀವು ಪಂಡರಪುರಕ್ಕೆ ಹೋಗಿ ಅಲ್ಲಿ ಕುಣಿಯಿರಿ”.

ಪುರೋಹಿತರ ಮಾತು ಕೇಳಿ ನಾಮದೇವರು “ವಿಠ್ಠಲ ಮತ್ತು ಶಿವ ಎಂದರೇನು? ಇವರಿಬ್ಬರಲ್ಲಿ ಎನೂ ಅಂತರವಿಲ್ಲ. ಶಿವನ ಮುಂದೆ ಕೀರ್ತನೆ ಮಾಡಬಾರದು ಎಂದು ಹೇಳಲಾಗಿದೇ?” ಇದನ್ನು ಕೇಳಿ ಪುರೋಹಿತನು ಇನ್ನಷ್ಟು ಕುಪಿತನಾಗಿ, “ಅಹಂಕಾರದಲ್ಲಿ ನಮಗೆ ಜ್ಞಾನ ಕಲಿಸುತ್ತೀರಾ ? ಇಲ್ಲಿಂದ ಹೊರಡಿ ಇಲ್ಲವಾದರೆ ಅನಾವಶ್ಯಕವಾಗಿ ಪೆಟ್ಟು ತಿನ್ನುತ್ತೀರಿ” ಎಂದು ಗದರಿಸಿದನು. ಆದರೆ ಯಾರೂ ಅಲ್ಲಿಂದ ಸರಿದಾಡಲಿಲ್ಲ. ಇದನ್ನು ನೋಡಿದ ಪುರೋಹಿತರು ನಾಮದೇವರನ್ನೇ ಅಲ್ಲಿಂದ ಓಡಿಸಲು ನಿಶ್ಚಯಿಸಿದರು. ಅವರು ನಾಮದೇವರಿಗೆ, “ನಿನ್ನ ಕೀರ್ತನದಿಂದ ದೇವಸ್ಥಾನಕ್ಕೆ ಬರುವ ಮಾರ್ಗ ಮುಚ್ಚಿದೆ. ನೀನು ದೇವಸ್ಥಾನದ ಹಿಂದೆ ಹೋಗಿ ಕೀರ್ತನೆ ಮಾಡು” ಎಂದರು.

ಇದನ್ನು ಕೇಳಿದ ನಾಮದೇವರು ಪುರೋಹಿತರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ದೇವಸ್ಥಾನದ ಹಿಂಬದಿಗೆ ಹೋಗಿ ಕೀರ್ತನೆ ಪ್ರಾರಂಭಿಸಿದರು. ಭಗವಂತನ ಕೀರ್ತನೆ ಅರ್ಧದಲ್ಲಿ ನಿಂತಿದ್ದರಿಂದ ನಾಮದೇವರು ಭಾವಪೂರ್ಣ ಅಂತಃಕರಣದಿಂದ ಪಾಂಡುರಂಗನಲ್ಲಿ ಬರಬೇಕೆಂದು ಪ್ರಾರ್ಥಿಸಿಕೊಂಡರು.

ವಿಠ್ಠಲನ ನಾಮದಲ್ಲಿ ಎಷ್ಟು ತಳಮಳ ಹೆಚ್ಚಾಗಿತ್ತು ಎಂದರೆ ಅವರ ಆರ್ತ ಕರೆಯು ಭಗವಂತನಿಗೆ ಮುಟ್ಟಿತು. ಪೂರ್ವ ದಿಶೆಯಲ್ಲಿ ಇದ್ದ ಶಿವನ ದೇವಸ್ಥಾನ ನಾಮದೇವರ ಎದುರಿಗೆ ಬಂದು ನಿಂತಿತು. ಈ ಚಮತ್ಕಾರವನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು. “ಕೈಲಾಶಪತಿ ನಾಮದೇವರ ಮೇಲೆ ಪ್ರಸನ್ನನಾದನು” ಎಂದು ಎಲ್ಲೆಡೆ ವಿಷಯ ಹಬ್ಬಿತು.

ಇಷ್ಟರಲ್ಲಿ ಭಗವಾನ ಶಿವನ ಪೂಜೆ ಮಾಡಿ ಪುರೋಹಿತರು ದೇವಸ್ಥಾನದಿಂದ ಹೊರಗೆ ಬರುತ್ತಿದ್ದಂತೆ, ಆಗಲೂ ದೇವಸ್ಥಾನದ ಮುಂದೆ ಕೀರ್ತನ ನಡೆದಿತ್ತು. ಇದು ಹೇಗೆ ಸಾಧ್ಯವೆಂದು ಅವರಿಗೆ ತಿಳಿಯದು! ಭಗವಂತನು ಸಾಕ್ಷಾತ ದೇವಸ್ಥಾನವನ್ನೇ ತಿರುಗಿಸಿ ಇಟ್ಟಿದ್ದನ್ನು ತಿಳಿದಾಗ ಪುರೋಹಿತರಿಗೆ ನಾಚಿಕೆಯಾಯಿತು. ಭಗವಂತನ ಪ್ರಿಯ ಭಕ್ತ ಯಾರೆಂದು, ಸ್ವತಃ ಭಗವಂತನೇ ತಿಳಿಸಿದ್ದನು. ದುಃಖಿತನಾದ ಪುರೋಹಿತರು ಕೀರ್ತನೆಯಲ್ಲಿ ಕುಳಿತರು. ದೇವರು ಭಕ್ತನಿಗಾಗಿ ದಿಕ್ಕನ್ನೇ ಬದಲಾಯಿಸಿದ ದೇವಸ್ಥಾನ ಇಂದಿಗೂ ಹಾಗೆಯೇ ಇದೆ.

ಈಶ್ವರನನ್ನು ಭಕ್ತಿಯಿಂದ, ತಳಮಳದಿಂದ ಕರೆದರೆ ಭಗವಂತನು ಓಡಿ ಬರುತ್ತಾನೆ. ಈಶ್ವರನಿಗೆ ತನ್ನ ನಿಜವಾದ ಭಕ್ತರು ಯಾರೆಂದು ತಿಳಿದಿದೆ. ಅವನು ಯಾವಾಗಲೂ ಭಕ್ತರಿಗೆ ಸಹಾಯ ಮಾಡುತ್ತಾನೆ.

Leave a Comment